ಹರಿದಾಸಿನಿ ಅಂಬಾಬಾಯಿಯವರ ಕೃತಿ
ರಾಗ : ನಾದನಾಮಕ್ರಿಯ
ತಾಳ : ಖಂಡಛಾಪು
ಕರುಣಿಸೈ ಶ್ರೀ ರಾಮ ಕೌಸಲ್ಯ ಪ್ರೇಮ
ಶರಣ ಜನಕನು ಪೊರೆವ ಕಾರುಣ್ಯಧಾಮ || ಪಿಎ ||
ದಶರಥಾತ್ಮಜ ಯಜ್ಞ ಕಾಯ್ದು ಸೀತೆಯ ವರಿಸಿ
ಕುಶಲದಿಂದಲಿ ಬಂದು ಪ್ರತಿಯೊಬ್ಬರಲೂ
ದಶರಥನ ಸೂಚನೆಯಲಿ ಸತಿ ಅನುಜ ಸಹ ವನದಿ
ನಸುನಗುತ ಚರಿಸಿ ರಕ್ಕಸರ ಸದೆ ಬಡಿದೆ || 1 ||
ಸತಿಯೆ ಕಳೆದಿರೆ ಹನುಮ ಹಿತವಾರ್ತೆ ಬಿನೈಸೆ
ಹತಗೈದು ರಾವಣಾದಿಗಳನೆಲ್ಲ
ಹಿತದ ರಾಜ್ಯದ ವಿಭೀಷಣ ರವಿಜರಿಗೆ ಇತ್ತು
ವ್ರತ ಬಿಡಿಸಿ ಭರತನಿಗೆ ಧರಣಿಯಾಳಿದನೇ || 2 ||
ಪಟ್ಟಾಭಿರಾಮ ಮಂಗಳ ನಾಮ ಕೃಪೆಯಿಂದ
ಇಷ್ಟಾರ್ಥವೀಯೊ ಸನ್ಮಂಗಳವನೂ
ದಿಟ್ಟ ಶ್ರೀ ಹನುಮ ವಂದಿತ ಚರಣ ನಮಿಸುವೆನು
ಶ್ರೇಷ್ಠ ಶ್ರೀ ಗೋಪಾಲಕೃಷ್ಣವಿಠ್ಠಲನೇ || 3 ||
No comments:
Post a Comment