ಶ್ರೀಕನಕದಾಸರ ಕೃತಿ
ರಾಗ : ಮಲಯಮಾರುತ
ಆದಿತಾಳ
ನಂಬು ನಾರಾಯಣನ ನಂಬು ನರಹರಿಯ
ನಂಬಿದಾ ಭಕ್ತರ ಕುಟುಂಬ ಸಾರಥಿಯ
॥ಪ॥
ಬಲಿ ನಂಬಿ ಪಾತಾಳಲೋಕಕರಸಾದ
ಅದೆಕುಲದ ಪ್ರಹ್ಲಾದನು ನಿಜವ ಕಂಡ
ಕಲಿ ವಿಭೀಷಣ ನಂಬಿ ಲಂಕೆಯಲಿ ಸ್ಥಿರವಾದ
ಛಲದ ಪಾರ್ಥನು ನಂಬಿ ವಿಶ್ವರೂಪವ ಕಂಡ||1||
ಅಂಬರೀಷನು ನಂಬಿ ವೈಕುಂಠವೇರಿದನು|
ಹಂಬಲಿಸಿ ಶಶಿಧರನು ಉರಿಯ ಗೆದ್ದ||
ಕುಂಭಿನೀದೇವಿ ತಾ ಬಂಧನವ ಕಳೆದಳು||
ಅಂಬುಜಾಕ್ಷಿ ದ್ರೌಪದಿಯು ಮಾನ ಉಳುಹಿಕೊಂಡಳು|| 2||
ಅತಿ ಭಕುತರಿಗೆ ಮೆಚ್ಚಿ ಗತಿಮೋಕ್ಷವನಿತ್ತನು|
ಮತಿಭ್ರಷ್ಟ ಅಜಮಿಳನ ಉದ್ಧರಿಸಿದನು||
ಕ್ಷಿತಿಯೊಳಗೆ ಕಾಗಿನೆಲೆ ಆದಿಕೇಶವರಾಯ|
ಪತಿತ ಪಾವನ ಪರಮಪುರುಷೋತ್ತಮನನು||3||
No comments:
Post a Comment