ಶ್ರೀಪುರಂದರದಾಸರ ಕೃತಿ
ರಾಗ : ರೀತಿಗೌಳ
ಆದಿತಾಳ
ಶ್ರೀನಿವಾಸನು ಒಲಿಯನು ಕೇಳೋ
ಜ್ಞಾನೋಪಾರ್ಜನೆ ಮಾಡದಲೆ
॥ಪ॥
ಏನೇನೋ ಸತ್ಕರ್ಮವ ಮಾಡಲು
ಪ್ರಾಣೇಶಾರ್ಪಣವೆನ್ನದಲೆ
॥ಅ.ಪ॥
ಸ್ನಾನವು ಸಂಧ್ಯಾವಂದನ ಜಪ ತಪ
ಜ್ಞಾನ ಸಾಧನವಿದೆನ್ನದಲೆ
ದಾನ ಧರ್ಮಗಳು ಈಶನ ಅನು-
ಸಂಧಾನವ ಮಾಡಿ ಮಾಡದಲೆ
॥೧॥
ಸಾಧು ಸಂಗದಲಿ ತೀರ್ಥಯಾತ್ರೆಗಳ
ಪಾದದಿ ನಡೆದು ನೀ ಮಾಡದಲೆ
ಭೇದಪಂಚಕವು ಜಗದಿ ಅಭೇದವ
ಮಾಧವನಲಿ ನೀ ತಿಳಿಯದಲೆ
॥೨॥
ಒಂದು ಕ್ಷಣವು ಬಿಡದಿಂದಿರೇಶ
ಗೋವಿಂದನಂಘ್ರಿಯ ನೀ ನೆನೆಯದಲೆ
ವಂದ್ಯನೂ ಶ್ರೀ ಪುರಂದರವಿಠಲ
ಬಂಧಕಮೋಚಕನೆನ್ನದಲೆ
॥೩॥
No comments:
Post a Comment