ಶ್ರೀವಿಜಯದಾಸರ ಕೃತಿ
ರಾಗ : ಹಿಂದೋಳ
ಆದಿತಾಳ
ವೇಣಿ ಮಾಧವನ ತೋರಿಸೆ ಜಾಣೆ ತ್ರಿವೇಣಿ
ಕಾಣದೆ ನಿಲ್ಲಲಾರೆನೆ ॥ಪ॥
ಕಾಣುತ ಭಕುತರ ಕರುಣದಿ ಸಲಹುವಿ
ಜಾಣೆ ತ್ರಿವೇಣಿ ಕಲ್ಯಾಣಿ ಸುಸನ್ನುತೆ ॥ಅ.ಪ॥
ಬಂದೆನೆ ಬಹಳ ದೂರದಿ ಭವಸಾಗರ ತರಣಿ
ನಿಂದೆನೆ ನಿನ್ನ ತೀರದಿ
ಒಂದು ಘಳಿಗೆ ನೀ ಹರಿಯ ಬಿಟ್ಟಿರಲಾರಿ
ಮಂದಗಮನೆ ಎನ್ನ ಮುಂದಕ್ಕೆ ಕರೆಯೆ ||1||
ಶರಣಾಗತರನು ಪೊರೆವುದು ಅದು ನಿನ್ನ ಬಿರುದು
ಕರುಣವಿಂದೆನ್ನ ಕರೆವುದು
ಸ್ಮರಣೆ ಮಾತ್ರದಿ ಭವ ತಾಪವ ಹರಿಸುವ
ಸ್ಮರನಪಿತನ ಮುರಹರನ ಕರುಣದಿ ||2||
ಸುಜನರಿಗೆಲ್ಲ ದಾತಳೆ ಸುಶೀಲೆ ಕೇಳೆ
ಕುಜನರ ಸಂಗದೂರಳೆ
ನಿಜ ಪದವಿಯನಿತ್ತು ಸಲಹುವ ನಮ್ಮ
ಶ್ರೀವಿಜಯವಿಠ್ಠಲನ ನಿಜಪದವನು ತೋರಿಸೆ ||3||
No comments:
Post a Comment