ಶ್ರೀವಿದ್ಯಾಪ್ರಸನ್ನತೀರ್ಥರ ಕೃತಿ
ರಾಗ : ದೇಶ್
ಆದಿತಾಳ
ಗಂಗೇ ಜನನೀ ಮಂಗಳರೂಪಿಣಿ
ತುಂಗ ಮಹಿಮನ ಪಾದಾಂಗುಳಿಜಾತೆ
॥ಪ॥
ಸಂಗತಿಯರುಹಲು ಬಂದಿರುವೆವು ಕೃಪಾ
ಪಾಂಗವ ತೋರೆಲೆ ಇಂಗಿತವರಿತು ॥ಅ.ಪ॥
ನಾಲ್ಕು ಮೊಗನು ಹರಿ ಕಾಲಿಗೆ ಕೆಡುಹಲು
ಶೂಲಧರನ ಶಿರ ಆಲಯ ಮಾಡಿದೆ
ಶೈಲದಂತಿಹ ಪಾಪ ಜಾಲಿಸಿ ಕಳೆಯುವೆ
ಪೇಳಲಳವೆ ನಿನ್ನ ಶೀಲವ ಸುಲಭದಿ ॥೧॥
ಚಾರು ನದಿಗಳು ಹೇರಳವಿದ್ದರು
ಭಾರತ ದೇಶದಿ ಭಾಗ್ಯದೇವತೆ ನೀ
ದೂರ ದೂರ ದೇಶಗಳಲಿ ನೆಲೆಸಿಹ
ಧೀರರು ನಿನ್ನಯ ಕೋರುತಲಿರುವರು ॥೨॥
ಅಂಗಳದಲಿ ಬಿದ್ದು ಹರಿವ ಜಲವು ನಿನ್ನ
ಸಂಗದಿ ಪರಮಮಂಗಲ್ಯವ ಪಡೆವುದು
ಶೃಂಗಾರದ ನಿಧಿ ರಂಗನ ಸೇವೆಗೆ
ಗಂಗೇ ಎನ್ನಂತರಂಗವ ಶೋಧಿಸೆ ॥೩॥
ಭೂಮಿಯ ಭೇದಿಸಿ ಸುಂದರ ರೂಪದಿ
ಸ್ವಾಮಿ ಶ್ರೀಮಧ್ವರ ಚರಣಕೆ ನಮಿಸಿ
ಆ ಮಹಾತ್ಮರ ದರುಶನದಿ ಪ್ರಸನ್ನಳೇ
ಕಾಮಿತ ಕರುಣಿಸೇ ತ್ರಿಕರಣ ಶುದ್ಧಿಯ ॥೪॥
No comments:
Post a Comment